ಕೊನೆಯ ಅಧ್ಯಾಯ
ಬೆಳಿಗ್ಗೆ ಬೇಗನೆ ಎದ್ದು, ಪ್ರಮುಖವಾದ ಮೀಟಿಂಗ್ಸ್ ಮತ್ತು ಕೆಲಸವನ್ನು ಮುಗಿಸಿ, ಕಾಫೀ ಶಾಪಿಗೆ ಹೊರಟ. ಇಬ್ಬರೂ ಅಲ್ಲೇ ಇದ್ದುದನ್ನು ಕಂಡು ಒಳಗೆ ನೆಡೆದ. ಅವರಿಬ್ಬರನ್ನು ಗಂಭೀರವಾಗಿ ವಿಚಾರಿಸಿದ.
“ಬುದ್ದಿ, ನನಗೇನು ಗೊತ್ತಿಲ್ಲ. ನಾವು ಈ ಊರಿಗೆ ಹೊಸಬರು. ನಮ್ಮ ತಾತ ಹತ್ತು ವರ್ಷದ ಹಿಂದೆ ಇಲ್ಲಿ ಕೆಲಸಕ್ಕೆ ಬಂದವರು ಮರಳಿ ಬರಲಿಲ್ಲ. ಬರುವಾಗ “ನೆಲ್ಲಿಕಟ್ಟಿಯಲ್ಲಿ ಕಾಗದ ಕಾರ್ಖಾನೆ ನಿರ್ಮಾಣಕ್ಕೆ ಜನ ಬೇಕಿದ್ದಾರೆ ಅಂತ ಹೇಳಿ ಹೋಗಿದ್ದರು” ಹೇಳುತ್ತಾ ಕಣ್ಣೀರಿಟ್ಟ.
“ಇಂದು ಏನಾದರು ಸುಳಿವು ಸಿಗುತ್ತೆ ಅಂತ ಅನ್ಕೊಂಡ್ರೆ, ಇದು ಇನ್ನು ಜಟಿಲವಾಗುತ್ತಿದೆ, ಛೆ!! ” ಭಾಸ್ಕರನು ದುಃಖ ವ್ಯಕ್ತಪಡಿಸಿದ.
“ಬುದ್ದಿ, ಮೋಹನಜ್ಜಒಬ್ಬರೇ ಇರೋದು. ಅವರಿಗೆ ಎಲ್ಲ ವಿಷಯ ಗೊತ್ತು. ಆದರೆ…”
“ಆದರೆ ಏನು? ಎಲ್ಲಿ ಇದ್ದಾರೆ? “
“ಅವರು ಜೀವಂತ ಶವಾಗಿದ್ದರೆ, ಯಾರಿಗೂ ಸ್ಪಂದಿಸುತ್ತಿಲ್ಲ”
“ಬಾ ತೋರಿಸು ನನಗೆ” ಎಂದು ಇಬ್ಬರು ಹೊರಟರು.
ಇಬ್ಬರು ಆಸ್ಪತ್ರೆಗೆ ತೆರಳಿದರು. ವೈದ್ಯರನ್ನು ವಿಚಾರಿಸಿ, ಅನುಮತಿ ಪಡೆದು, ಮೋಹನಜ್ಜನನ್ನು ನೋಡಲು ಒಳಗೆ ಹೋದ.
ಭಾಸ್ಕರನ ಕಂಡು ಅಜ್ಜನ ಕಣ್ಣಲ್ಲಿ ನೀರು ಹರಿಯಿತು, ಕೈ ಬೆರಳು ನಡುಕಿತು. ಅವರ ಕುಟುಂಬದವರು ವೈದ್ಯರನ್ನು ಕರೆದು ತೋರಿಸಿದರು.
“ಅವರು ಪ್ರತಿಕ್ರಿಯಿಸುತ್ತಿದ್ದಾರೆ. ದೇವರು ನಿಮ್ಮ ತಾಳ್ಮೆಗೆ, ಇಷ್ಟು ವರ್ಷದ ಹೋರಾಟಕ್ಕೆ ಆಲಿಸಿ , ಪವಾಡ ಮಾಡಿದ್ದಾನೆ. ಇವರು ಇನ್ನು ಒಂದು ವಾರದಲ್ಲಿ ಸರಿ ಹೋಗುತ್ತಾರೆ” ಎಂದರು ಡಾಕ್ಟರ್.
ಭಾಸ್ಕರನು ಭಾವುಕನಾದನು. ಒಂದು ವಾರ ಅಲ್ಲೇ ಇದ್ದು, ಎಲ್ಲವನು ತಿಳಿದುಕೊಂಡೆ ಹೋಗುವುದಾಗಿ ಪಣ ತೊಟ್ಟನು. ಅವರ ಆರೈಕೆ ಮಾಡಿದನು. ಮೋಹನಜ್ಜ ಗುಣಮುಖರಾದರು.
“ನೀನು ರುದ್ರೇಶವರ ಮೊಮ್ಮಗನೇ? ಥೇಟ್ ಅವನೇ ಬಂದು ನಿಂತಾಹಂಗೆ ಆಯಿತು. ಅವನ ತ್ಯಾಗಕ್ಕೆ ನ್ಯಾಯ ಸಿಗಲೇ ಬೇಕು” ಮರುಕುತ್ತಾ ಆದ ಹಳೆ ಘಟನೆ ಹೇಳತೊಡಗಿದ.
ರುದ್ರೇಶಪ್ಪ ಆಧುನಿಕತೆಗೆ ವಿರೋಧಿಯಲ್ಲ ಆದರೆ ಪ್ರಕೃತಿಯನ್ನು ಹಾಳುಮಾಡುವ ಅಭಿವೃದ್ಧಿಯ ವಿರೋಧಿ. ಮೂರು ಗ್ರಾಮಗಳು ಗಂಗಾವತಿ ನದಿಯನ್ನು ಅವಲಂಭಿಸಿದೆ. ಪ್ರತಿ ಹಳ್ಳಿಯ ಮೂರನೇ ಒಂದು ಭಾಗವನ್ನು ಈ ಬೃಹತ್ ಕಾರ್ಖಾನೆ ಆಕ್ರಮಿಸಲಿದೆ. ವ್ಯವಸಾಯ ಹಾಗು ಬೆಳೆಗಳು ಹಾಳಾಗುತ್ತೆ. ಹಣದಾಸೆ ತೋರಿಸಿ ನಮ್ಮ ಗ್ರಾಮಾಧ್ಯಕ್ಷ ಎರಡು ಹಳ್ಳಿಯನ್ನು ಕಡಿಮೆ ಬೆಲೆಗೆ ಕೊಂಡುಕೊಂಡ. ಜನರು ಊರು ಬಿಟ್ಟು ನಗರಕ್ಕೆ ಹೋದರು. ನೆಲ್ಲಿಕಟ್ಟಿ ಜನರು ಮಾತ್ರ ನಿಮ್ಮಜ್ಜನ ಮಾತಿನಂತೆ ಅವರನ್ನು ಎದುರು ಹಾಕಿಕೊಂಡರು. ಅವರ ಯಾವ ತಂತ್ರವು ಈ ಊರಿನ ಜನರನ್ನು ಬಗ್ಗಿಸಲು ಆಗಲೇ ಇಲ್ಲ. ಅದಕ್ಕೆ ಆ ನೀಚ, ಕಾಡು ಆನೆಗೆ ಔಷಧಿ ಚುಚ್ಚಿ ರುದ್ರೇಶಪ್ಪ ಮನೆಯಲ್ಲಿ ಇದ್ದಾಗ ಆನೆಗಳನ್ನು ಬಿಟ್ಟರು. ಅವು ಮದವೇರಿದ ಸಲಗಳಾದವು. ಅವರನ್ನು ಚಚ್ಚಿಹಾಕಿತು. ಅದಕ್ಕೆ ನಾನೊಬ್ಬನೇ ಸಾಕ್ಷಿ. ಕಣ್ಣಾರೆ ಬೆಟ್ಟದ ಮೇಲಿಂದ ಕಂಡಿದ್ದೇನೆ, ಕಿವಿಯಾರೆ ಅವರ ಕುತಂತ್ರವನ್ನು ಆಲಿಸಿದ್ದೆ. ರುದ್ರೇಶಪ್ಪನವರನ್ನು ಚಚ್ಚಿ ಬಿಸಾಕಿದನ್ನು ಕಂಡು, ಭಯಗೇಡಿ, ಕಾಲು ಜಾರಿ ಕೆಳೆಗೆ ಬಿದ್ದಿದ್ದು ಮಾತ್ರ ನೆನಪು. ಇವತ್ತಿಗೂ ನೆನಪಿಸಿಕೊಂಡರೆ ಭಯವಾಗುತ್ತೆ, ಸಂಕಟವಾಗುತ್ತೆ.
ಇದೆಲ್ಲವನ್ನು ರೆಕಾರ್ಡ್ ಮಾಡಿಕೊಂಡ ಭಾಸ್ಕರ. ಹಿಂದಿನ ಅಧಿಕಾರಿಯು ಈಗಾಗಲೇ ಸಿದ್ಧಪಡಿಸಿದ ವರದಿಯನ್ನುತೆಗೆದುಕೊಂಡು, ಅದರಲ್ಲಿದ್ದ ನಿಖರವಾದ ಕಾರಣಗಳಿಂದ ತಿರಸ್ಕರಿಸಿದ್ದ ದಾಖಲೆ ಹಾಗು ಈ ರೆಕಾರ್ಡಿಂಗ್ ತೆಗೆದುಕೊಂಡು ಸಂಬಂಧಪಟ್ಟ ಇಲಾಖೆಗೆ ಒಪ್ಪಿಸಿದ.
ಪ್ರಕರಣವನ್ನು ಪುನಃರಾಂಭಿಸಿ , ಎಲ್ಲ ಸಾಕ್ಷಿಆಧಾರ ಪರಿಶೀಲಿಸಿ, ಕಾರ್ಖಾನೆಯ ನಿರ್ಮಾಣ ಸ್ಥಗಿತಗೊಳುಸುವಂತೆ ಆದೇಶವಾಯಿತು. ತನ್ನ ಲಾಭಕ್ಕಾಗಿ ಸಾಕ್ಷಿ ನಾಶ, ಕೊಲೆ ಹಾಗು ಹಿಂದಿನ ವರದಿಯನ್ನು ಬದಲಾವಣೆ ಮಾಡಿದ ಕಾರಣಕ್ಕೆ ಗ್ರಾಮಾಧ್ಯಕ್ಷನಿಗೆ ಶಿಕ್ಷೆ ವಿಧಿಸಿದರು.
ಭಾಸ್ಕರನ ಆನಂದಕ್ಕೆ ಕೊನೆಯೇ ಇಲ್ಲವಾಯಿತು. ಮೊದಲು ಅಜ್ಜಿಗೆ ಕರೆ ಮಾಡಿ , ಎಲ್ಲ ವಿಷಯವನ್ನು ಹೇಳಿದ. ಇಡೀ ಕುಟುಂಬವನ್ನು ಅವರ ಹಳ್ಳಿ ಮನೆಗೆ ಕರೆದೊಯ್ದನು. ಮುಂದಿನ ವಾರ ದೀಪಾವಳಿ ಹಬ್ಬ. ಅಜ್ಜಿಗೆ ಮಾತಿಟ್ಟಂತೆ ಈ ವರ್ಷದ ಹಬ್ಬ ನಮ್ಮೂರಲ್ಲಿ ಹಾಗೆ ಆಯಿತು.
ಕುಟುಂಬದವರೆಲ್ಲರೂ ರುದ್ರೇಶವರನ್ನು ಜ್ಞಾಪಿಸುತ್ತ, ಹಬ್ಬದ ತಯಾರಿ ಮಾಡುತ್ತ, ಮಗನ ಧೈರ್ಯಕ್ಕೆ, ಸಾಧನೆಗೆ ಮೆಚ್ಚುಗೆ ಇಟ್ಟರು.
ಭಾಸ್ಕರನು ಅಜ್ಜಿಯ ಆನಂದಭಾಷ್ಪವನ್ನು ಒರೆಸುತ್ತಾ “ಮೈ ಡಿಯರ್ ಲವ್, ಹ್ಯಾಪಿ ನಾ? ನೀನೆ ಹೇಳಿದ ಹಾಗೆ ಸತ್ಯಕ್ಕೆ ಯಾವಾಗಲು ಸೋಲಿಲ್ಲ. ಕೆಟ್ಟ ಕತ್ತಲೆಯನ್ನು ಕಳೆದೆವು. ದೀಪದೊಂದಿಗೆ ನಮ್ಮ ಆನಂದದ ಬೆಳಕನ್ನು ಚೆಲ್ಲಿ ಆನಂದಿಸೋಣ”.
***The End***
ಈ ಕಥೆಯನ್ನು ಮೂಲತಃ ಕರ್ಮವೀರ ದೀಪಾವಳಿ ಕಥಾಸ್ಪರ್ಧೆಗೆ ಬರಿದಿದ್ದು. ಆಯ್ಕೆ ಆಗದ ಕಾರಣ ನನ್ನ ಬ್ಲಾಗನಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ನೀವು ಇದನ್ನಾ ಓದಿ ಆನಂದಿಸುತ್ತೀರಿ ಎನ್ನುವ ಭರವಸೆಯೊಂದಿಗೆ,
ನಿಮ್ಮ,
ಶಿಲ್ಪಾ ನಾಯರಿ.